Tuesday, July 01, 2025

ಒಂದು ರೂಪಾಯಿ ಕಥೆ


ಇವತ್ತು ಅರ್ಜೆಂಟ್ ಆಗಿ ಪೋಸ್ಟ್ ಆಫೀಸ್ ಹೋಗಿ ಪೋಸ್ಟ್ ಕಾರ್ಡ್ ಒಂದನ್ನು ತರಬೇಕಾಗಿತ್ತು, ನಾನು 3 ಗಂಟೆಗೆ  ಹೋದೆ, ಹೋಗುವ ಗಡಿಬಿಡಿಯಲ್ಲಿ ಪರ್ಸ್ ಕೂಡ ತಗೆದುಕೊಂಡು ಹೋಗಿರಲಿಲ್ಲ,  ಕೈಯಲ್ಲಿ 100ರೂಪಾಯಿ ತೆಗೆದುಕೊಂಡು  ಹೋಗಿದ್ದೆ. ಅಲ್ಲಿ ಹೋಗಿ ಒಂದು ಅಂಚೆ ಕಾರ್ಡ್ ಬೆಲೆ ಎಷ್ಟು ಅಂತ ಕೇಳಿದೆ ಅದಕ್ಕೆ ಆ ಮೇಡಮ್ ಹೇಳಿದ್ರು ನೀವು ಎರಡು ಕಾರ್ಡ್ ತೆಗೆದುಕೊಳ್ಳಿ ಏರಡು ಕಾರ್ಡ್ ನ ಬೆಲೆ ಒಂದು ರೂಪಾಯಿ ಅಂತ, ಮೇಡಮ್ ನನ್ನ ಬಳಿ ಚೇಂಜ್ ಇಲ್ಲ ಬರುವ ಅವಸರದಲ್ಲಿ 100 ರೂಪಾಯಿ ತಂದಿದ್ದೇನೆ  ಅಂದೆ. ನೋಡಮ್ಮ ನಮಗೆ ಒಂದು ರೂಪಾಯಿ ಅಷ್ಟೇ ಬೇಕು ಜಾಸ್ತಿನೂ ಬೇಡ ಕಮ್ಮಿನೂ ಬೇಡ ಅಂದರು.  ಅಯ್ಯೋ ಒಂದು ರೂಪಾಯಿಗೆ ಎಲ್ಲಿಗಪ್ಪ ಹೋಗೋದು ಅಂತ ಚಿಂತೆ ಶುರು ಆಯಿತು, ಆಫೀಸ್ ಗೆ ವಾಪಸ್ ಹೋಗಿ ಒಂದು ರೂಪಾಯಿ ತರುವ ಅಂದರೆ NH 66 highway ಮತ್ತೆ ದಾಟಬೇಕು  ಅದು ನನಗೆ ಬಾರಿ ಕಷ್ಟದ ಕೆಲಸ. ನೀವು ಸ್ವಲ್ಪ ಹೊತ್ತು wait ಮಾಡಿ ನಿಮಗೆ ಕಾರ್ಡ್ ಮಾಡಿ ಕೊಡುತ್ತಾರೆ ಎಂದು ಹೇಳಿದರು ನಾನು ಹಾ ಸರಿ ಎಂದು ಹೇಳಿ ಅಲ್ಲೇ ಕುರ್ಚಿಯಲ್ಲಿ ಕುಳಿತುಕೊಂಡೆ.  ನನ್ನ ತಲೆಯಲ್ಲಿ ಒಂದೇ ಪ್ರಶ್ನೆ ಓಡುತಿತ್ತು ಒಂದು ರೂಪಾಯಿ ಚೇಂಜ್ ಗೆ ಎಲ್ಲಿ ಹೋಗೋದು ಅಂತ!  ದೇವ್ರು ಏನೋ ಒಂದು ದಾರಿ ಕೊಟ್ಟೇ ಕೊಡ್ತಾನೆ ಅಂತ ಹಾಗೆ ಸುಮ್ಮನೆ ಕುಳಿತುಕೊಂಡೆ. ಸ್ವಲ್ಪ ಹೊತ್ತಿನ ಬಳಿಕ ನನಗೆ ಕಾರ್ಡ್ ರೆಡಿ ಮಾಡಿ ಕೊಟ್ರು. ಥ್ಯಾಂಕ್ಯೂ ಮೇಡಂ ಆದರೆ ನನ್ನ ಬಳಿ ಒಂದು ರೂಪಾಯಿ ಇಲ್ಲ ಅಂದ ಮತ್ತೊಂದು ಬಾರಿ ಹೇಳಿದೆ ಅದಕ್ಕೆ ಅವರು ನೋಡಮ್ಮ ಅಲ್ಲಿ ಸರ್ ಹತ್ರ ಹೇಳು ಅಂದ್ರು. ನಾನು ಅವರ ಬಳಿ ಹೋಗಿ ಅದನ್ನೇ ಹೇಳಿದೆ ಅದಕ್ಕೆ ಆ ಸರ್ ಒಂದು ರೂಪಾಯಿ ಕೊಡಿ ಚೇಂಜ್ ಇಲ್ಲ ಅಂದ್ರು. ಏನು ಮಾಡೋದು ಗೊತ್ತಾಗಿಲ್ಲ, ಅಯ್ಯೋ ದೇವ್ರೆ ಎನ್ ಮಾಡ್ಲಿ ಅಂತ ಮನಸಲ್ಲೇ ಅಂದುಕೊಂಡೆ ಅಷ್ಟರಲ್ಲಿ ಇನ್ನೊಬ್ಬರು ಮೇಡಂ ನನ್ನ ಕರೆದು ಕೇಳಿದ್ರು ಮೇಡಂ ಈ ಟೇಬಲ್ ಮೇಲೆ ಒಂದು ರೂಪಾಯಿ ಇಟ್ಟಿದ್ದು ನೀವೇನಾ ಅಂತ ನಾನು ಹೇಳಿದೆ ನಾನು ಇಟ್ಟಿಲ್ಲ ಅಂತ, ಹೌದಾ ಸರಿ ಪರ್ವಾಗಿಲ್ಲ ಬಿಡಿ ನಿಮ್ ಹತ್ರ ಚೇಂಜ್ ಇಲ್ಲ ಅಲ್ವಾ ಇದು ನೀವೇ ಕೊಟ್ಟಿದ್ದು ಅಂತ ಕನ್ಸಿಡರ್ ಮಾಡ್ತೀವಿ ನೀವ್ ಇನ್ನು ಹೋಗಿ ಅಂದ್ರು. ಅಬ್ಬಾ ದೇವ್ರೆ ಕಾಪಾಡಿದೆ ನನ್ನ ಅಂತ ದೇವ್ರಿಗೆ ಮನಸಲ್ಲೇ ಥ್ಯಾಂಕ್ಸ್ ಹೇಳಿ ಅಲ್ಲಿನ ಅಧಿಕಾರಿಗಳಿಗೆ ಥ್ಯಾಂಕ್ಸ್ ಹೇಳಿ ಅಲ್ಲಿಂದ ಹೊರಟು ಬಂದೆ. ಇಲ್ಲಿ ಎರಡು ವಿಷಯ ತುಂಬಾ ದೊಡ್ಡದು ಅನಿಸ್ತು ಒಂದು ಏನಂದ್ರೆ ಒಂದು ರೂಪಾಯಿ ಅನ್ನೋದು ಸಣ್ಣ ಅಮೌಂಟ್ ಆಗಿತ್ತು ಆದರೆ ನನಗೆ ಆ ಕ್ಷಣಕ್ಕೆ ಅದು ದೊಡ್ಡ ಅಮೌಂಟ್ ಥರ ಅನ್ನಿಸ್ತು ಕೈಯಲ್ಲಿ 100 ರೂಪಾಯಿ ಇದ್ದರೂ ಕೂಡ ಒಂದು ರೂಪಾಯಿಯ ಬೆಲೆ ಜಾಸ್ತಿ ಆದ ಹಾಗೆ ಆಯಿತು.ಇನ್ನೊಂದು ವಿಷಯ ಏನಂದ್ರೆ ಆ ಟೇಬಲ್ ಮೇಲೆ ಇದ್ದ ಒಂದು ರೂಪಾಯಿ ಎಲ್ಲಿಂದ ಬಂತು ಅನ್ನೋದು, ನಾನು ಸುಮಾರು ಹೊತ್ತು ಅಲ್ಲೇ ಕುಳಿತಿದ್ದೆ ಆದರೆ ನನಗೆ ಒಂದು ರೂಪಾಯಿ ಕಾಣಿಸಿಲ್ಲ, ಆ ದೇವರೇ ಬಂದು ನನಗೊಂದು ಪುಟ್ಟ ಸಹಾಯ ಮಾಡಿದ ಹಾಗೆ ಆಯಿತು.

Sunday, June 18, 2023

ಇವರು ತುಂಬಾನೇ ಸ್ಪೆಷಲ್! ಇವರ ಜೊತೆ ಮಾತನಾಡಿದರೆ ಏನೋ ಒಂತರ ಖುಷಿ. ಮನಸ್ಸಿಗೆ ಏನಾದ್ರು ಬೇಜಾರಾದ್ರೆ ಅದನ್ನ ಇವರ ಜೊತೆ ಹೇಳಿಕೊಂಡರೆ ಅದೇನೋ ಒಂತರಾ ಸಮಾಧಾನ, ಮನಸಿನ ಭಾರ ಕಳೆದುಕೊಂಡ ಹಾಗೆ ಆಗುತ್ತೆ. ಪ್ರತಿ ದಿನ ಆಗೋ ಸಣ್ಣ ಪುಟ್ಟ ವಿಷಯಗಳನ್ನು ಅವರ ಜೊತೆ ಹಂಚಿಕೊಳ್ತೀವಿ. ಅದೇನೇ ವಿಷಯ ಇರ್ಲಿ, ಅದೇನೇ ಸಂದರ್ಭ ಆಗಿರ್ಲಿ ಯಾವಾಗ್ಲೂ ನಮ್ಮ ಜೊತೆ ಇರ್ತಾರೆ.ಒಂದೊಂದು ಸಲ ನಾವು ಬೇಜಾರಾಗಿ ಸುಮ್ನೆ ಇದ್ದು ಏನು ಹೇಳದೇ ಇದ್ರು ಅವರು ಅದನ್ನು ಅರ್ಥ ಮಾಡಿಕೊಳ್ತಾರೆ. ಅದೇ ಕಾರಣಕ್ಕೆ ತಾನೇ ಅವ್ರು ಅಂದ್ರೆ ನಮಗೆ ಅಷ್ಟು ಇಷ್ಟ ಆಗೋದು. ತಾವು ಎಷ್ಟೇ ಬೇಜರಾಗಿದ್ರು ಅದನ್ನ ನಮ್ಮ ಜೊತೆ ಹೇಳಿಕೊಳ್ಳಲ್ಲ, ಯಾವಾಗ್ಲೂ ನಮ್ಮನ ನಗಿಸೋ ಪ್ರಯತ್ನ ಮಾಡ್ತಾರೆ

Monday, June 12, 2023

ಕ್ರಷ್ ಕಹಾನಿ

ಕ್ರಷ್ ಅಂತೆ ಕ್ರಷ್! ಹೌದು ಎಲ್ಲರ ಲೈಫ್ ಅಲ್ಲಿ ಒಬ್ರು ಕ್ರಷ್ ಅಂತ ಇದ್ದೇ ಇರ್ತಾರೆ ಬಿಡಿ. ಆದ್ರೆ ನನ್ ಬೆಸ್ಟ್ ಫ್ರೆಂಡ್ ಇದ್ದಾಳೆ  ಇವಳಿಗೆ ಇರೋ ಕ್ರಷ್ ಒಂದಲ್ಲ ಎರಡಲ್ಲ, ಒಂದು ದೊಡ್ಡ ಲಿಸ್ಟ್ ಇದೆ. ನನಗೆ ಅನ್ಸತ್ತೆ ನ್ನನ್ನ ಫ್ರೆಂಡ್ ಲಿಸ್ಟ್ ಗಿಂತ ಜಾಸ್ತಿ ಇವಳ ಕ್ರಷ್ ಲಿಸ್ಟ್ ಇದೆ ಅಂತ!  ಅವ್ಳು ಪ್ರತಿ ಸಲ ಬಂದು ಕ್ರಷ್ ಬಗ್ಗೆ ಹೇಳಬೇಕಾದರೆ ನನಗೆ ಕನ್ಫ್ಯೂಷನ್ ಆಗುತ್ತೆ ಇವ್ಳು ಯಾವ ಕ್ರಷ್ ಬಗ್ಗೆ ಹೇಳ್ತಾ ಇದ್ದಾಳೆ ಅಂತ! ಆದ್ರೂ ಇವಳ ಕ್ರಷ್ ಸ್ಟೋರಿ ಕೇಳೋಕೆ ಒಂತರಾ ಮಜಾ ಇರುತ್ತೆ. ಅವಳು ಪ್ರತಿ ಸಲ ಕ್ರಷ್ ಬಗ್ಗೆ ಹೇಳಬೇಕಾದರೆ ಒಂದೊಂದ್ ಸಲ ನನಗೂ ನನ್ನ ಕ್ರಷ್ ನೆನಪಾಗುತ್ತೆ.
ಕ್ರಷ್ ನೋಡಿದ್ರೆ ಸಾಕು ಅದೇನೋ ಖುಷಿ ಅವಳಿಗೆ, ಒಂದು ನೋಟ ಸಾಕು ನಾಚಿ ನೀರಾಗಿ ಹೋಗ್ತಾಳೆ. ಏನಾದ್ರೂ ಅವನು ಬಂದು ಮಾತನಾಡಿಸಿದರೆ ಅಬ್ಬಾ ಇವಳು ಭೂಮಿ ಬಿಟ್ಟು ಆಕಾಶದಲ್ಲಿ ತೇಲಿ ಹೋಗಬಹುದು, ಅದು ಸಹಜನೇ ಅಲ್ವಾ ಏನೋ ಒಂತರಾ ಖುಷಿ ಆಗುತ್ತೆ. 
ಇವತ್ತು ಯಾಕೋ ಖುಷಿಯಲ್ಲಿ ಇದ್ಲು ಯಾಕೆ ಅಂತ ಕೇಳಿದ್ರೆ ಕ್ರಷ್ ನೋಡಿದೆ ಅಂತ ಹೇಳಿದ್ಲು , ಅದೇನು ಖುಷಿ ಅದೇನು ನಾಚಿಕೆ ಆಹಾ!  

ಅವಳ  ಹೃದಯ ಚಿಟ್ಟೆಯಾಗಿ 
ಹಾರಿ ಹೋಗಿದೆ  ಅವನ ಹಿಂದೆ
ಆದರೂ  ಅವನು ತಿರುಗಿ ನೊಡಲಿಲ್ಲ
ಹಾಗಂತ ಇವಳು ಸುಮ್ಮನೆ ಇರುವುದಿಲ್ಲ
Instagram ಅಲ್ಲೆ request ಕಳುಹಿಸಿ ಬಿಟ್ಟಳಲ್ಲ
ಆದರೂ ಪಾಪ ಅವನು request ಇನ್ನೂ accept ಮಾಡಲಿಲ್ಲ !
ಅವಳ ಕ್ರಷ್ ಬಗ್ಗೆ ಜಾಸ್ತಿ  ಹೇಳಿದ್ರೆ ಪಾಪ ಅವನಿಗೆ ದೃಷ್ಟಿ ಆಗಬಹುದು ಆಮೇಲೆ ನನಗೆ ಬೈತಾಳೆ ನನ್ನ ಫ್ರೆಂಡ್ ಇಷ್ಟು ಸಾಕು ಅನ್ಸತ್ತೆ. ಅಂದ ಹಾಗೆ ನಿಮಗೆ ನಿಮ್ಮ ಕ್ರಷ್ ನೆನಪಾಯ್ತ?  ನನಗಂತೂ ಆಯ್ತು... 
ಇಷ್ಟೆಲ್ಲಾ ಹೇಳಿದ ಮೇಲೆ ಏನ್ ನೋಡ್ತಾ ಇದ್ದೀರಾ? ನಿಮ್ಮ ಸ್ನೇಹಿತರಿಗೆ  ಇದನ್ನು ಕಳುಹಿಸಿ. ನಿಮ್ಮ ಕ್ರಷ್ ಗೆ ಕಳುಹಿಸಿದರೂ ಪರ್ವಾಗಿಲ್ಲ ಬಿಡಿ, ಯಾರಿಗೆ ಗೊತ್ತು ಅವರಿಗೂ ನಿಮ್ಮ ಕ್ರಷ್ ಇದ್ರು ಇರಬಹುದು..

Sunday, April 23, 2023

ಅತ್ತು ಸೋತಿದೆ ಈ ಹೃದಯ
ನಿನಗೆ ಇದರ ಅರಿವಿದೆಯಾ
ಈ ನೋವಿಗೆ ಬೇಕಿದೆ ಸಾಂತ್ವಾನ
ನೀ ನೀಡುವೆಯಾ ನಗುವಿನ ಆಹ್ವಾನ 

Sunday, December 12, 2021

🎶🤗♥

ನಮ್ಮ ಮನಸ್ಥಿತಿ ಯಾವಾಗಲೂ ಒಂದೇ ತರ ಇರಲ್ಲ ಆಗಾಗ ಯಾವುದೋ ಕಾರಣಕ್ಕೆ ಏರುಪೇರು ಆಗುತ್ತಾ ಇರುತ್ತದೆ ನಾವು ಇಂಗ್ಲೀಷ್ ಅಲ್ಲಿ ಮೂಡ್ ಸ್ವಿಂಗ್ಸ್ ಅಂತೀವಲ್ಲ ಅದೇ. ಕೆಲವೊಂದು ಸಲ ನಮ್ಮ ಮನಸ್ಸಿಗೆ ತುಂಬಾ ಬೇಜಾರಾದಾಗ ನಮಗೆ ಬೇರೆ ಯಾವ ವಿಷಯದಲ್ಲೂ ಆಸಕ್ತಿ ಇರುವುದಿಲ್ಲ ಒಂಟಿಯಾಗಿ ಇರಲು ಬಯಸುತ್ತೇವೆ. ಮನಸ್ಸಿಗೆ ಸಮಾಧಾನ ಆಗುವಂತೆ ಮಾಡಲು ಏನಾದರೂ ಮಾಡುತ್ತೇವೆ. ನಮಗೆ ಮೂಡ್ ಸರಿ ಇಲ್ಲ ಅಂತ ಅನಿಸಿದಾಗಲೆಲ್ಲ ನಾವು ಹೆಚ್ಚಾಗಿ ನಮಗೆ ಇಷ್ಟ ಆಗುವ ಹಾಡನ್ನು ಕೇಳಲು ಬಯಸುತ್ತೇವೆ. ಸಂಗೀತಕ್ಕೆ ಮನಸ್ಸಿಗೆ ಮುದ ನೀಡುವ ಒಂದು ಶಕ್ತಿಯಿದೆ. ಸಂಗೀತ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಹೊಸ ಹುರುಪು ಉತ್ಸಾಹ ತುಂಬುತ್ತದೆ.  
ಹಾಗಾಗಿ ಮೂಡ್ ಸರಿ ಇಲ್ಲದ ಸಮಯದಲ್ಲಿ ಕೇಳೋಕೆ ಅಂತಾನೆ ನಮ್ಮ ಪ್ಲೇಲಿಸ್ಟ್ ಕೆಲವೊಂದು ಹಾಡುಗಳು ಇರುತ್ತೆ. 
ನನಗೆ ಬೇಜಾರಾದಾಗ, ಮನಸ್ಸು ಸರಿ ಇಲ್ಲ ಅಂತ ಅನಿಸುವಾಗ ಅಥವಾ ಏನೋ ಭಯ, ಚಿಂತೆ ಕಾಡಿದಾಗ ನಾನು ಜಾಸ್ತಿ ಕೇಳುವ ಕೆಲವು ಹಾಡುಗಳು ಈ ಕೆಳಗಿನಂತೆ ಇದೆ.

1.  ಅರಳುವ ಹೂವುಗಳೇ



▪ ಚಿತ್ರ: ಮೈ ಆಟೋಗ್ರಾಫ್ (2006)
▪ ಹಾಡು : ಅರಳುವ ಹೂವುಗಳೇ
▪ ಗಾಯಕಿ :  ಕೆ.ಎಸ್ ಚಿತ್ರಾ
▪ ಸಂಗೀತ : ಭಾರದ್ವಾಜ್
▪ ಸಾಹಿತ್ಯ : ಕೆ. ಕಲ್ಯಾಣ್

2006ರಲ್ಲಿ ತೆರೆ ಕಂಡ ಮೈ ಆಟೋಗ್ರಾಫ್ ಚಿತ್ರದ ಈ ಹಾಡು ಅಂದ್ರೆ ಎಲ್ಲರಿಗೂ ಇಷ್ಟ.. ಈ ಹಾಡಿನಲ್ಲಿ ಅಂತಹ ಸೆಳೆತ ಇದೆ, ಮನಸ್ಸಿಗೆ ಧೈರ್ಯ ತುಂಬುವ ಶಕ್ತಿ ಇದೆ, ನೋವುಗಳ ಮರೆಸಿ ನಗು ತರುವ ಸಾಮರ್ಥ್ಯ ಇದೆ.  ಈ ಹಾಡನ್ನು ಈಗ ಕೇಳಿದರು ಅದೇ ಹೊಸತನ 
 ಅದೇ ಅನುಭವ ಅಗುತ್ತದೆ.

2. ಏನಾಗಲಿ ಮುಂದೆ ಸಾಗು ನೀ


▪ ಚಿತ್ರ : ಮುಸ್ಸಂಜೆ ಮಾತು(2008)
▪ ಹಾಡು : ಏನಾಗಲಿ ಮುಂದೆ ಸಾಗು ನೀ
▪ ಗಾಯಕ : ಸೋನು ನಿಗಮ್
▪ ಸಾಹಿತ್ಯ :ವಿ. ಶ್ರೀಧರ್
https://youtu.be/f6636xqsLGc
ಮುಸ್ಸಂಜೆ ಮಾತು ಚಿತ್ರ  ಅಂದ ಕೂಡಲೇ ನೆನಪಾಗುವುದೇ ಈ ಹಾಡು. ಈ ಹಾಡು  ಎಲ್ಲರ ಅಚ್ಚುಮೆಚ್ಚು.  ಈಗಲೂ ಕೆಲವರ ಫೋನಿನಲ್ಲಿ  ಇದೇ ಹಾಡು callertune ಇದೆ.

3. ಹಾರು ಹಾರು
▪ ಚಿತ್ರ : ನಿನ್ನಿಂದಲೇ(2014)
▪ ಹಾಡು : ಹಾರು ಹಾರು
▪ ಗಾಯಕರು : ಸ್ವೀಕರ್, ಚೈತ್ರಾ ಹೆಚ್.ಜಿ
▪ ಸಾಹಿತ್ಯ : ಕವಿರಾಜ್

ನಿನ್ನಿದಲೇ ಚಿತ್ರದ ಈ ಹಾಡು ನನಗೆ ತುಂಬಾ ಇಷ್ಟ. 
ಹಾರು ಹಾರು ಹಾರು ರೆಕ್ಕೆ ಬಿಚ್ಚಿ ಹಾರು ಬಿಟ್ಟು ಬಿಡೆ ಇನ್ನು ಬೇಜಾರು
ನೂರು ಕೊಹಿನೂರು ನೀನು ನಕ್ರೆ ಚೂರು ನಕ್ಕು ಬಿಡೆ
ಈಗ ಒಂಚೂರು
ನೀ ನಕ್ಕರೆ ನಗುವುದು ಜಗವಿದು ಕನ್ನಡಿ
ಮುನ್ನಡೆಯುತ ಹೋದರೆ ಗುರಿಗಳು  ಕಾಲಡಿ
ಏನಾದ್ರೂ take it easy 
ಗೆಲ್ಲೋಕೆ ಇಲ್ಲಿ ಬಾಜಿ
ಏಷ್ಟು ಚೆನ್ನಾಗಿದೆ ಈ ಸಾಲುಗಳು.. 

4. ಪವರ್ ಆಫ್ ಯೂತ್



▪ ಚಿತ್ರ: ಯುವರತ್ನ (2021)
▪ ಹಾಡು: ಪವರ್ ಆಫ್ ಯೂಥ್
▪ ಗಾಯಕ: ನಕಾಶ್ ಅಜೀಜ್
▪ ಸಾಹಿತ್ಯ: ಸಂತೋಷ್ ಆನಂದ್ರಾಮ್
▪ ಸಂಗೀತ: ತಮನ್ ಎಸ್
ಈ ಹಾಡಿನ ಶೀರ್ಷಿಕೆಯಂತೆ  ಹಾಡಿನಲ್ಲಿ ಪವರ್ ಇದೆ. ಯುವ ಜನತೆಗೆ ಹೇಳಿ ಮಾಡಿಸಿರುವ ಹಾಗಿದೆ ಈ ಹಾಡು. ಸಂತೋಷ್ ಆನಂದ್ರಾಮ್ ಅವರು ಅದ್ಬುತವಾಗಿ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪ್ರತಿ ಚಿತ್ರದಲ್ಲಿಯೂ ಇಂತಹದೊಂದು ಪವರ್ಫುಲ್ ಹಾಡು ಇದ್ದೇ   ಇರುತ್ತದೆ.

5.ಕುಟ್ಟಿ ಸ್ಟೋರಿ

▪ ಚಿತ್ರ : ಮಾಸ್ಟರ್ (2020)
▪ ಹಾಡು : ಕುಟ್ಟಿ ಸ್ಟೋರಿ
▪ ಗಾಯಕರು : ದಳಪತಿ ವಿಜಯ್ ಮತ್ತು ಅನಿರುದ್ಧ ರವಿಚಂದರ್
▪ ಸಂಗೀತ : ಅನಿರುದ್ಧ ರವಿಚಂದರ್
▪ಅರುಣರಾಜ ಕಾಮರಾಜ್ 

ಕುಟ್ಟಿ ಸ್ಟೋರಿ ಹಾಡು ಅಂದ್ರೆ ನನಗೆ ತುಂಬಾ ತುಂಬಾ ಇಷ್ಟ. ಈ ಹಾಡು ರಿಲೀಸ್ ಆದ ದಿನದಿಂದ ಈಗಿನವರೆಗೆ ಅದೆಷ್ಟು ಸಲ ಕೇಳಿದ್ದೀನೋ ಗೊತ್ತಿಲ್ಲ ಆದರೆ ಪ್ರತಿ ದಿನ ಈ ಹಾಡು ಕೇಳ್ತಾ ಇರ್ತೀನಿ. ಕೇಳಿದಷ್ಟು ಮತ್ತೆ ಕೇಳಬೇಕು ಅನಿಸುತ್ತೆ. ಮೂಡ್ ಸರಿ ಇಲ್ಲ ಅಂದ್ರೆ ಈಗ ಮೊದಲು ನೆನಪಾಗುವ ಹಾಡು ಅಂದ್ರೆ ಇದೇನೇ.   ನಾನು ಈ ಹಾಡಿನ ಅಭಿಮಾನಿ.
Life is very short nanba
Always be happy 

6. ಇದುವುಂ ಕಡಂದು ಪೋಗುಂ


▪ ಚಿತ್ರ : ನೆಟ್ರಿಕನ್(2021)
▪ ಹಾಡು: ಇದುವುಂ ಕಡಂದು ಪೋಗುಂ
▪ ಗಾಯಕ: ಸಿದ್ ಶ್ರೀರಾಮ್
▪ ಸಂಗೀತ ಸಂಯೋಜನೆ: ಗಿರೀಶ್
▪ ಸಾಹಿತ್ಯ:  ಕಾರ್ತಿಕ್ ನೇತಾ
ಸಿದ್ ಶ್ರೀರಾಮ್ ಅವರು ಹಾಡಿರುವ ಈ ಹಾಡು 2021ರಲ್ಲಿ ತೆರೆ ಕಂಡ netrikann ಚಿತ್ರದ ಹಾಡು. ಈ ಚಿತ್ರ ನೋಡಿದವರಿಗೆ ಈ 
ಹಾಡು ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.

ಮನಸಿನ ನೋವನ್ನು ಗುಣಪಡಿಸುವ, ಹೊಸ ಭರವಸೆ ತರಿಸುವ, ಏನೋ ಹೊಸ ಉತ್ಸಾಹ ತುಂಬುವ ಹಾಡುಗಳಿವು. ಈ ಎಲ್ಲಾ ಹಾಡುಗಳು ನನಗೆ ತುಂಬಾ ಇಷ್ಟ.
ಇದೇ ಥರ ನಿಮಗೂ ಇಷ್ಟ ಆಗುವ ಹಾಡುಗಳು ಬೇರೆ ಇರಬಹುದು ಆ ಹಾಡುಗಳು ನಿಮಗೆ ಧೈರ್ಯ ತುಂಬಹುದು ಖುಷಿ ತರಬಹುದು.


ನಾನು ಹೇಳಿರುವ ಹಾಡುಗಳಲ್ಲಿ ಕೆಲವು   ಹಾಡು ನಿಮಗೆ ಹೊಸದಾಗಿದ್ದರೆ ಅದನ್ನು ಈಗಲೇ  ಕೇಳಿ ನೋಡಿ ನಿಮಗೂ ಇಷ್ಟವಾಗಬಹುದು. ಒಂದು ಬಾರಿ ಹಾಗೆ ಕಮೆಂಟ್ಸ್  ಕಡೆಗೆ ಕಣ್ಣು ಹಾಯಿಸಿ ಅದೆಷ್ಟೋ ಜನ ಈಗಲೂ ಹಳೆಯ ಹಾಡುಗಳನ್ನು ಕೇಳಿ ಆನಂದಿಸುತ್ತಾರೆ ನೋವುಗಳನ್ನು ಮರೆಯುತ್ತಾರೆ.





Monday, November 01, 2021

 ಯಾವುದು ಇಲ್ಲಿ ಶಾಶ್ವತ?

ಯಾವುದು ಇಲ್ಲಿ ನಮ್ಮ ಸ್ವಂತ?

ಈ ಬದುಕೆನ್ನುವುದೇ ಒಂದು ರೋಚಕ!

ಮುಂದೇನಾಗುವುದೋ ಎಂಬುದು ಪ್ರಶ್ನಾರ್ಥಕ ?

ಈ ಕ್ಷಣವನ್ನು ಅನುಭವಿಸುತ,

ನಗು ಪ್ರೀತಿಯನು ಹಂಚುತ

ಬದುಕೋಣ ನಮ್ಮ  ಈ ಜೀವಿತ...

Saturday, October 23, 2021

ರತ್ನನ್ ಪ್ರಪಂಚ

 ರತ್ನನ್ ಪ್ರಪಂಚ ಚಿತ್ರದಲ್ಲಿ ತಾಯಿ ಮಗನ ಬಾಂಧವ್ಯವನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಎಲ್ಲಾ ಪಾತ್ರವು ಅದರದೇ ಆದ ಪ್ರಾಮುಖ್ಯತೆ ಹೊಂದಿದೆ. ರತ್ನಾಕರ ಪಾತ್ರಕ್ಕೆ ಧನಂಜಯ್ ಅವರ ಜೀವ ತುಂಬಿ ಇನ್ನೊಂದು ಬಾರಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಇನ್ನು ಉಡಾಲ್ ಬಾಬು ರಾವ್ ಪಾತ್ರವನ್ನು ಬಹಳ ಅದ್ಬುತವಾಗಿ ಪ್ರಮೋದ್ ಅವರು ನಿರ್ವಹಿಸಿ ಎಲ್ಲರ ಮನ ಗೆದ್ದಿದ್ದಾರೆ. 



ತನಗೆ ಜನುಮ ನೀಡಿದ ತಾಯಿಯ ಹುಡುಕಾಟದಲ್ಲಿ ಅಲೆಮಾರಿಯಂತೆ ಸಾಗುವ ರತ್ನಾಕರ ಕೊನೆಗೆ ಕಳೆದುಕೊಳ್ಳುವುದು ತನಗೆ ಜೀವವಾಗಿದ್ದ ತಾಯಿಯನ್ನು. ಪ್ರಪಂಚ ತುಂಬಾ ವಿಶಾಲವಾಗಿರಬಹುದು ಆದರೆ ತಾಯಿಯ ಪ್ರೀತಿ ಮಮತೆಯಷ್ಟು ವಿಶಾಲವಾದ ಪ್ರಪಂಚ ಯಾವುದು ಇಲ್ಲ. 

ನಮ್ಮಲ್ಲಿ ಇಲ್ಲದಿರುವುದನ್ನು ಹುಡುಕುತ್ತಾ ಹೋದರೆ ಕೊನೆಗೆ ನಮ್ಮ ಜೊತೆ ಇರುವುದನ್ನು ಕಳೆದುಕೊಳ್ಳುತ್ತೇವೆ. ವಸ್ತು ಅಥವಾ ವ್ಯಕ್ತಿ ನಮ್ಮ ಜೊತೆ ಇರುವಾಗಲೇ ಜೋಪಾನ ಮಾಡಬೇಕು ನಮ್ಮಿಂದ ದೂರವಾದ ಮೇಲೆ ಅಥವಾ ಕಳೆದುಕೊಂಡ ಮೇಲೆ ವಿಷಾದಿಸಿ ಏನು ಪ್ರಯೋಜನ.?ನಾವುಗಳು ಹಾಗೆ ತಾನೇ ಹಂಬಲ, ಕುತೂಹಲ, ಸಂತೋಷದ ಹುಡುಕಾಟದಲ್ಲಿ ಕಳೆದುಕೊಳ್ಳುವುದು ಮಾತ್ರ ನೆಮ್ಮದಿಯನ್ನು.. 

ರತ್ನನ್ ಪ್ರಪಂಚಕ್ಕೆ ಒಂದು ಸಾರಿ ಭೇಟಿ ನೀಡಿ ಖಂಡಿತ ಅವನ ಪ್ರಪಂಚ ನಿಮಗೆ ಇಷ್ಟ ಆಗುತ್ತೆ. ಈ ಚಿತ್ರ ನೋಡುವಾಗ ರತ್ನಾಕರನ ಅಲೆಮಾರಿ ಪಯಣದಲ್ಲಿ ನಾವು ಒಂದು ಭಾಗ ಅಂತ ಅನಿಸುತ್ತೆ. ನಗು ಇದೆ, ಅಳುವು ಇದೆ, ಒಳ್ಳೆಯ ಹಾಡುಗಳು ಇದೆ. ಭಾವುಕರಾಗ್ತೀರ. ಒಂದು ಪರಿಪೂರ್ಣ ಚಿತ್ರ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ . ಮಿಸ್ ಮಾಡದೆ ನೋಡಿ 

Tuesday, October 19, 2021

ಈ ಬದುಕಲಿ ಗೆಲುವು
 ತುಂಬಿದೆ ನೀನು
ತೋರುತಾ ಒಲವು
ಈ ಕಣ್ಣಲಿ ಕನಸು
ಮನಸಲಿ ಹುರುಪು
ತಂದಿಹೆ ನೀನು
ಜೊತೆಯೇ ನೀನಿರಲು ಹೀಗೆ
ನಿನ್ನ ಜೊತೆಯಾಗಿ ನಾ ನಿಲ್ಲುವೆ 
ನನ್ನ ಹಾಡು, ನನ್ನ ಪಾಡು
ನನ್ನ ಬದುಕೇ ನೀನು ಎಂದಿಗೂ...

Tuesday, October 12, 2021

 ಮನಸ್ಸು ಎಂಬ ಅಂಗಳಕ್ಕೆ 

ನೆಮ್ಮದಿ ಎಂಬ ರಂಗವಲ್ಲಿ ಬಿಡಿಸುತ್ತಿದೆ

ಅದೆಲ್ಲಿಂದಲೋ ಕಷ್ಟ ಎಂಬ ಬಿರುಗಾಳಿ ಬೀಸಿ

 ಎಲ್ಲವನ್ನೂ ಅಳಿಸಿ ಹಾಕಿದೆ


Saturday, October 02, 2021

 ಚಿಂತೆಗು ಚಿಂತೆಯಾಗುವಂತೆ ಮರೆ ನಿನ್ನ ಚಿಂತೆಗಳ !

ಮರೆವಿಗು ನೆನಪಾಗದಂತೆ ಮರೆ ಎಲ್ಲ ಚಿಂತೆಗಳ !

Saturday, September 18, 2021

ಅಮ್ಮ




 ಅಮ್ಮ ಎಂದರೆ ನನ್ನಮ್ಮ

ನಿನಗಾರು ಸಾಟಿ ಇಲ್ಲಮ್ಮ

ಪ್ರತಿ ಜನುಮದಲ್ಲು ನಾನೇ ನಿನ್ನ ಕಂದಮ್ಮ

ಸಾವಿರ ಜನುಮಕು ನೀನಾಗಬೇಕು ನನ್ನ ಹೆತ್ತಮ್ಮ


ನನಗಾಗಿ ನೀನೆಷ್ಟು ಶ್ರಮಿಸುವೆ

ನನಗೆ ನೋವಾದರೆ ನೀನಳುವೆ

ನನ್ನ ಖುಷಿ ನೋಡಿ ನೀ ನಗುವೆ

ನನಗೆ ಒಳಿತಾಗಲಿ ಎಂದು ಬಯಸುವೆ


ನೀ ಮಾಡುವೆ ನನಗೆ ಸಹಾಯ

ಹೋಗಲಾಡಿಸುವೆ ನನ್ನ ಭಯ

ನನ್ನ ನಿನ್ನ ನಡುವೆ ಪ್ರೀತಿಯ ವಿನಿಮಯ

ಸದಾ ಹೀಗೆ ಇರಲಿ ನಮ್ಮ ಈ ಬಾಂಧವ್ಯ


ಆ ದೇವರು ಹೇಗಿದ್ದಾನೋ ನಾ ಅರಿಯೆನೆ

ನನ್ನ ಪಾಲಿನ ದೇವತೆ ನೀನೇನೆ

ನಾ ಸದಾ ಪ್ರೀತಿಸುವೆ ನಿನ್ನನ್ನೇ

ನೀನಿರದೆ ನಾ ಬರಿ ಶೂನ್ಯನೇ


ನನ್ನ ಜೀವನ ನಿನಗೆಂದೆ ಅರ್ಪಿತ

ನಾ ಬಯಸುವೆ ನಿನ್ನ ಹಿತ

ನಾನೆಂದಿಗೂ ನಿನ್ನ ಸ್ವಂತ

ಅಮ್ಮ ನೀನಿರು ಸದಾ ನಗುನಗುತಾ


Monday, September 13, 2021

  


ನನಗೆ ಮೊದಲಿನಿಂದಲೂ ಮೂವಿ ನೋಡೋ ಹುಚ್ಚು . ಸಮಯ ಸಿಕ್ಕಾಗಲೆಲ್ಲಾ ಮೂವಿ ನೋಡುತ್ತಿರುತ್ತೇನೆ. ಒಂದು ಒಳ್ಳೆ ಮೂವಿ ನೋಡಿದ್ರೆ ಅದೇನೋ ಸಮಾಧಾನ, ಖುಷಿ ಆಗುತ್ತೆ. ಮೂವಿ ನೋಡುತ್ತಾ ಇರಬೇಕಾದರೆ ವಾಸ್ತವವನ್ನು ಮರೆತು ಸಿನೆಮಾ ಪ್ರಪಂಚದಲ್ಲಿ ಮುಳುಗಿ ಹೋಗಿರುತ್ತವೆ. 


ಕೆಲವೊಂದು ಸಲ ಬೋರ್ ಆಗುತ್ತದೆ ಎಂದು ಮೂವಿ ನೋಡಿದರೆ ಇನ್ನೂ ಕೆಲವು ಸಲ ಮೂವಿ ನೋಡಿ ಬೋರ್ ಆಗುವುದು ಉಂಟು. ಒಬ್ಬೊಬ್ಬರಿಗೆ ಒಂದೊದು ತರಹದ ಮೂವಿ ಇಷ್ಟ ಆಗುತ್ತೆ. ನಾನು ನನಗೆ ಸಸ್ಪೆನ್ಸ್ ಥ್ರಿಲ್ಲರ್ ಮೂವೀಸ್ ಅಂದ್ರೆ ಜಾಸ್ತಿ ಇಷ್ಟ. ಕೆಲವು ಮೂವೀಸ್ ನಮ್ಮ ಮನಸಿನ ಮೇಲೆ ಜಾಸ್ತಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಪಾತ್ರ ಆಗಿರಬಹುದು ಅಥವಾ ಕೆಲವು ಸನ್ನಿವೇಶಗಳು ನಮಗೆ ವಾಸ್ತವದಲ್ಲಿ ಸಂಬಂಧಿಸಿದಂತೆ ಅನಿಸುತ್ತದೆ, ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತದೆ.




 ಲಾಕ್ಡೌನ್ ಸಮಯದಲ್ಲಿ ಬರೀ ಮೂವೀಸ್ ನೋಡಿದ್ದೆ ಆಯ್ತು. ಹೊಸ ಮೂವೀಸ್ OTT ರಿಲೀಸ್ ಆಗುತ್ತಿದ್ದಂತೆ ಅದನ್ನು ನೋಡುವ ಕಾತುರ ಜಾಸ್ತಿ ಹಾಗೆ ದಿನ ಒಂದು ಮೂವಿ ನೋಡುತ್ತಿದ್ದೆ. 






2020-2021ರಲ್ಲಿ ನನಗೆ ಇಷ್ಟವಾದ ಕೆಲವು ಮೂವೀಸ್ ಇವು. 


Dia


Love mocktail


Gypsy


Kannum Kannum Kollaiyadithaal


Oh My Kadavule


Penguin


Soorarai Pottru


Ala Vaikunthapurramloo


 Ashwathama


HIT: The First Case


Ninnila Ninnila


Yuvaratna 


Teddy


Karnan


Netrikann


Shershah


Tuck Jagadish




ನನಗೆ ಇಷ್ಟವಾದ ಮೂವಿ ನಿಮಗೆ ಇಷ್ಟವಾಗದೇ ಇರಬಹುದು!



Sunday, September 12, 2021

ಪರೀಕ್ಷೆ

ಪರೀಕ್ಷೆ ಅಂದರೆ ಯಾರಿಗೆ ತಾನೇ ಭಯ, ಚಿಂತೆ ಇರಲ್ಲ ಹೇಳಿ? ಅದೆಷ್ಟು ಸಲ ಪರೀಕ್ಷೆ ಬರೆದಿದ್ದರು ಪ್ರತೀ ಸಲ ಪರೀಕ್ಷೆ ಬರೆಯಲು ಹೋದಾಗ ಅದೇ ಚಿಂತೆ,ಅದೇ ಭಯ ಕಾಡುತ್ತದೆ.ಕೆಲವರಿಗೆ ಪರೀಕ್ಷೆ ಭಯದಿಂದ ಜ್ವರನೇ ಬರುತ್ತೆ.ಇನ್ನು ಕೆಲವರಂತೂ ಪರೀಕ್ಷೆಯ ಹಿಂದಿನ ದಿನ ನಿದ್ದೆ ಬಿಟ್ಟು ಓದಿಕೊಂಡು ಬಂದಿರುತ್ತಾರೆ. ನಿದ್ದೆ ಬಿಟ್ಟು ತಲೆ ನೋವು ಒಂದು ಕಡೆ ಇರುತ್ತೆ ಇನ್ನೊಂದು ಕಡೆ ಭಯ. ಯಪ್ಪಾ ನನಗೆ ನಿದ್ದೆ ಬಿಟ್ಟು ಓದುವುದು ಅಂದ್ರೆ ಆಗಲ್ಲ ಚೆನ್ನಾಗಿ ನಿದ್ದೆ ಮಾಡಿದ್ರೆ ಮಾತ್ರ ನನಗೆ ಪರೀಕ್ಷೆ ಬರೆಯೋದಕ್ಕೆ ಆಗೋದು. ರಾತ್ರಿ ನಿದ್ದೆಗಾಗಿ ಓದುವುದನ್ನು ಬಿಟ್ಟು ಮಲಗಿದ್ದು ಉಂಟು ಆದರೆ ಓದುವುದಕಾಗಿ ನಿದ್ದೆ ಬಿಟ್ಟು ಓದಿದ ಪ್ರಸಂಗ ಬಾರಿ ಕಡಿಮೆ. ಆ ಕಡೆ ನಿದ್ದೇನು ಇಲ್ಲ ಈ ಕಡೆ ಸರಿಯಾಗಿ ಓದುವುದಕ್ಕೂ ಆಗಲ್ಲ. ನಿದ್ದೆ ಕೆಟ್ಟು ಪರೀಕ್ಷೆ ಬರೆಯೋದಕ್ಕೆ ಹೋದರೆ ನಾನು ಪರೀಕ್ಷೆ ಬರೆಯೋ ಬದಲು ನಿದ್ದೆ ಮಾಡ್ತೇನೆ ಅಷ್ಟೇ. ಈ ನಿದ್ದೆ ಬಿಟ್ಟು ಓದಿಕೊಂಡು ಚೆನ್ನಾಗಿ ಪರೀಕ್ಷೆ ಬರಿಯೋದು ತುಂಬಾನೇ ಕಷ್ಟ ಇದೆಲ್ಲ ನಿಭಾಯಿಸಿಕೊಂಡು ಪರೀಕ್ಷೆ ಬರೆಯೋರೆಲ್ಲ ತುಂಬಾನೇ ಗ್ರೇಟ್ ಅನ್ಸತ್ತೆ ನನಗೆ ಯಾಕಂದ್ರೆ ನನಗೆ ಹೇಗೆ ನಿದ್ದೆ ಬಿಟ್ಟು ಓದೋದು ತುಂಬಾನೇ ಕಷ್ಟದ ಕೆಲಸ.


ಚಿತ್ರಕೃಪೆ - ಅಂತರ್ಜಾಲ


ಇನ್ನು ಈ ಪರೀಕ್ಷೆ ಶುರು ಆಗುವ 30 ನಿಮಿಷದ ಮೊದಲೇ ನಮ್ಮನ್ನು ಪರೀಕ್ಷಾ ಕೊಠಡಿಯಲ್ಲಿ ಕೂರಿಸುತ್ತಾರೆ, ಆ 30 ನಿಮಿಷಗಳಲ್ಲಿ ಆಗೋ ಭಯ ಅಷ್ಟಿಷ್ಟಲ್ಲ ಪ್ರಶ್ನೆಪತ್ರಿಕೆ ಸುಲಭವಾಗಿ ಇರುತ್ತೋ ಅಥವಾ ಕಷ್ಟವಾಗಿ ಇರುತ್ತೋ ಹಾಗೆ ಹೀಗೆ ಏನೇನೋ ಆಲೋಚನೆಗಳು ತಲೆಯಲ್ಲಿ ಓಡುತ್ತಾ ಇರುತ್ತೆ. ಪ್ರಶ್ನೆಪತ್ರಿಕೆ ಕೈಗೆ ಸಿಗುವಷ್ಟರಲ್ಲಿ ನಾವು ಓದಿದ್ದು ಭಯ ಅನ್ನುವ ನದಿಯಲ್ಲಿ ಕೊಚ್ಚಿ ಹೋಗಿರುತ್ತೆ ಅಷ್ಟೇ. ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಮೇಲೆ ಒಂದು ಸಲ ಪೂರ್ತಿಯಾಗಿ ಎಲ್ಲಾ ಪ್ರಶ್ನೆಗಳತ್ತ ಕಣ್ಣು ಹಾಯಸಲು ಆರಂಭಿಸಿದಾಗ, ಮೊದಲನೇ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದಾದರೆ ಅಲ್ಲಿಗೆ ಕಥೆ ಮುಗಿಯಿತು ಬಾಕಿ ಗೊತ್ತಿರುವ ಉತ್ತರಗಳು ಮರೆತು ಹೋಗುತ್ತೆ. ಉತ್ತೀರ್ಣರಾಗಬೇಕಾದರೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಹಾಗೆ ಬದಿಗಿರಿಸಿ ಮುಂದಿನ ಪ್ರಶ್ನೆಗೆ ಜಿಗಿಯಬೇಕಲ್ಲವೇ! ಏನೋ  ಗೊತ್ತಿರುವಷ್ಟು, ನೆನಪಿಗೆ ಬಂದಷ್ಟು ಬರೆದು ಮುಗಿಸಬೇಕು ಅಷ್ಟೇ. ಗೊತ್ತಿರುವಷ್ಟು ಬರೆದು ಮುಗಿಸಿ ಆಚೆ ಕಣ್ಣು ಹಾಯಿಸಿದರೆ ಎಲ್ಲರೂ ಗಂಭೀರವಾಗಿ ಉತ್ತರಪತ್ರಿಕೆಯಲ್ಲಿ ಬರೆಯುತ್ತಿದ್ದರೆ ನಾನು ಮಾತ್ರ ಉತ್ತರ ತಿಳಿಯದೇ ಏನು ಬರೆಯೋದು ಅನ್ನುವ ಚಿಂತೆಯಲ್ಲಿ ಮುಳುಗಿದ್ದೆ . ಆದರೆ ಏನು ಮಾಡುವುದು ಈ ಪರೀಕ್ಷೆ ಎಂಬ ಯುದ್ಧದ್ದಲ್ಲಿ ನಾವು ಒಂಟಿಯಾಗಿಯೇ ಹೊರಾಡಬೇಕು ಯಾರು ನಮ್ಮ ನೆರವಿಗೆ ಬರುವುದಿಲ್ಲ ಬರಲಾಗುವುದು ಇಲ್ಲ. ಉತ್ತಮ ಅಂಕ ಪಡೆಯಬೇಕು ಇಲ್ಲ ಕನಿಷ್ಟ ಪಕ್ಷ ಉತ್ತೀರ್ಣರಾಗಿ ಪರೀಕ್ಷೆ ಎಂಬ ಯುದ್ಧ ಗೆಲ್ಲಬೇಕು, ಅದಕ್ಕಾಗಿ 3 ಗಂಟೆ ಪರೀಕ್ಷೆಯ ಕೊಠಡಿಯಲ್ಲಿ ಪೆನ್ನು ಹಿಡಿದು ಉತ್ತರಪತ್ರಿಕೆಯಲ್ಲಿ ತಲೆ ಉಪಯೋಗಿಸಿ ಏನೋ ಉತ್ತರ ಬರೆಯಬೇಕು. ಸರಿಯಾಗಿ ನಿದ್ದೇನು ಮಾಡದೆ ಸರಿಯಾಗಿ ಓದೋಕೂ ಆಗದೆ ಚಡಪಡಿಸಿವುದಕ್ಕಿಂತ ಆರಾಮಾಗಿ ಮಲಗಿ ಆದಷ್ಟು ಓದುದುವುದೇ ಉತ್ತಮ ಅನ್ನುವುದು ನನ್ನ ಅಭಿಪ್ರಾಯ. ಆಮೇಲೆ ನಿದ್ದೆ ಬಿಟ್ಟು ತಲೆ ಕೆಟ್ಟು ಪರೀಕ್ಷೆ ಬರೆಯೋ 

ಹೇಗೋ ಏನೋ 3 ಗಂಟೆ ಕಳೆದು ಪರೀಕ್ಷಾ ಕೊಠಡಿಯಿಂದ ಆಚೆ ಬರುವ ಹೊತ್ತಿಗೆ ತಲೆ ನೋವು ಶುರು ಆಗಿರುತ್ತೆ. ಆಚೆ ಬಂದು ನೋಡಿದರೆ ಸಾಕು ಕೆಲವರು ಪ್ರಶ್ನೆಪತ್ರಿಕೆಯ ಉತ್ತರಗಳ ಬಗ್ಗೆ ಚರ್ಚಿಸಲು ಶುರು ಮಾಡಿಕೊಂಡಿರುತ್ತಾರೆ , ಮೊದಲೇ ಉತ್ತರ ಗೊತ್ತಿಲದೇ ಏನೋ ಒಂದು ಉತ್ತರ ಬರೆದು ಬಂದಿರುತ್ತೇವೆ ಇನ್ನು ಇವರ ಚರ್ಚೆ ಕೇಳಿದ್ರೆ ಇರೋ ತಲೆ ಕೆಡುವುದು ಪಕ್ಕಾ. ಆಮೇಲೆ ತಲೆ ಕೆಟ್ಟರೆ ಮುಂದಿನ ಪರೀಕ್ಷೆ ಬರೆಯೋದು ಯಾರು ಅಲ್ವಾ? ಅದಕ್ಕೆ ನಾನು ಪರೀಕ್ಷಾ ಕೊಠಡಿಯಿಂದ ಆಚೆ ಬಂದ ನಂತರ ಬ್ಯಾಗ್ ಹಾಕಿಕೊಂಡು ಸೀದ ಮನೆಗೆ ಹೊರಡೋದು. 

ಇನ್ನು ಮನೆಗೆ ಬಂದ ತಕ್ಷಣ ಅಮ್ಮ ಕೇಳುವ ಮೊದಲ ಪ್ರಶ್ನೆನೇ "ಹೇಗಿತ್ತು ಇವತ್ತಿನ ಪರೀಕ್ಷೆ? ಚೆನ್ನಾಗಿ ಬರೆದೆ ತಾನೇ ಒಳ್ಳೆ ಅಂಕ ಸಿಗುತ್ತಾ ಇಲ್ವಾ"? ಹೀಗೆ ಅಮ್ಮ ಕೇಳೋದು ಹೊಸತೇನಲ್ಲ ಯಾವಾಗ್ಲೂ ಇದೇ ತರ ಕೇಳೋದು ಅಂತ ನನಗೆ ಗೊತ್ತು,ಅದಕ್ಕೆ ನಾನು ಉತ್ತರ ರೆಡಿ ಮಾಡಿಕೊಂಡಿರುತ್ತೇನೆ. ಅಯ್ಯೋ ಅಮ್ಮಾ ಇವತ್ತಿನ ಪರೀಕ್ಷೆ ಎಷ್ಟು ಕಷ್ಟ ಇತ್ತು ಯಾವುದಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ,ನನಗೆ ಮಾತ್ರ ಅಲ್ಲಾ ಎಲ್ಲರಿಗೂ ಕಷ್ಟ ಆಗಿತ್ತು. ಕಡಿಮೆ ಅಂಕ ಬಂದ್ರೆ ಬೈಯೋದ್ಯಕ್ಕೆ ರೆಡಿ ಆಗಿರು ಅಮ್ಮ ಅಂತ ಹೇಳುತ್ತಿದ್ದೆ ನಾನು ಹೀಗೆ ಹೇಳೋದು ಹೊಸತೇನಲ್ಲ ನಾನು ಪ್ರತಿ ಸಲ ಇದೇ ಮಾತು ಹೇಳುತ್ತಿದ್ದೆ ಅದು ಅಮ್ಮನಿಗೂ ಗೊತ್ತಿರುವ ವಿಚಾರ. ಅಮ್ಮ ಪಾಪ ಏನೂ ಹೇಳದೆ ನನಗೆ ಸಮಾಧಾನ ಮಾಡುತ್ತಿದ್ದರು. ಪರ್ವಾಗಿಲ್ಲ ಬಿಡು ಮುಂದಿನ ಸಲ ಚೆನ್ನಾಗಿ ಬರೆದು ಒಳ್ಳೆ ಅಂಕ ಪಡ್ಕೊಂಡ್ರೆ ಆಯ್ತು ಅಂತ ಹೇಳಿ ಸುಮ್ಮನಾಗುತ್ತಿದ್ರು. ನನ್ನ ಮಗಳಿಗೆ ಒಳ್ಳೆ ಅಂಕ ಬಂದು ಪಾಸ್ ಆಗ್ಲಿ ಅಂತ ಅದೆಷ್ಟು ದೇವರಿಗೆ ಹರಕೆ ಕಟ್ಟಿಕೊಂಡಿರುತ್ತಾರೆ ಅಂತ ಅವರಿಗೆ ಅಷ್ಟೇ ಗೊತ್ತು ಎಲ್ಲಾ ತಾಯಂದಿರು ಹೀಗೇನೇ...


ಪರೀಕ್ಷೆ ದಿನ ಆಗೋ ಭಯ ಒಂದು ರೀತಿ ಆದ್ರೆ ಇನ್ನು ಪರೀಕ್ಷೆ ಮುಗಿಸಿದ ಮೇಲೆ ಫಲಿತಾಂಶದ ಭಯ ಇನ್ನೊಂದು ರೀತಿ. ಯಾವುದೋ ಒಂದು ವಿಷಯದಲ್ಲಿ ಚೆನ್ನಾಗಿಯೇ ಬರೆದಿರ್ತಿವಿ ಆವಾಗ ಒಳ್ಳೆ ಅಂಕ ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್ ಮಾತ್ರ ನಮಗೆ ಇರಲ್ಲ ಆದ್ರೆ ಯಾವುದೋ ವಿಷಯ ಕಷ್ಟ ಇದ್ದು ಆ ಪರೀಕ್ಷೆ ಚೆನ್ನಾಗಿ ಬರಿಯದೇ ಇದ್ದಾಗ ನಮಗೆ ಕಡಿಮೆ ಅಂಕ ಸಿಗಬಹುದು ಅಥವಾ ನಾವು ಫೇಲ್ ಆಗ್ತಿವಿ ಅನ್ನೋ ಕಾನ್ಫಿಡೆನ್ಸ್ ಅದೆಲ್ಲಿಂದ ಬರತ್ತೆ ಅನ್ನೋದು ಗೊತ್ತಾಗಲ್ಲ. ಇನ್ನು ಇವತ್ತು ಫಲಿತಾಂಶ ಪ್ರಕಟ ಆಗುತ್ತೆ ಅಂತ ತಿಳಿದಾಗ ಆಗೋ ಭಯ ಪರೀಕ್ಷೆ ಬರಿಯೋ ಸಮಯದಲ್ಲಿ ಆಗುವ ಭಯಕ್ಕಿಂತ ದುಪ್ಪಟ್ಟಾಗಿರುತ್ತದೆ. ನಾನು ಖಂಡಿತ ಫೇಲ್ ಆಗ್ತೀನಿ ಅನ್ನೋ ಭಯ. ಏನ್ ಮಾಡೋದು ಫಲಿತಾಂಶ ನೋಡಲೇಬೇಕು ಅಲ್ವಾ ಹೇಗೋ ಗಟ್ಟಿ ಮನಸ್ಸು ಮಾಡಿ ನೋಡಿದ್ರೆ ಪಾಸ್ ಅಂತ ಇರುತ್ತೆ. ನಾವ್ ಯಾವಾಗ ಫೇಲ್ ಅಗ್ತಿವಿ ಅಂತ ಅನ್ಕೊಂಡು ಇರ್ತೀವಿ ನೋಡಿ ಆವಾಗ ಪಾಸ್ ಅಂತ ಗೊತ್ತಾದಾಗ ಆಗೋ ಖುಷಿ , ಸಮಾಧಾನ, ನಾವ್ ಚೆನ್ನಾಗಿ ಪರೀಕ್ಷೆ ಬರ್ದು ಪಾಸ್ ಆದಾಗ ಸಿಗೋ ಖುಷಿಗಿಂತ ದುಪ್ಪಟ್ಟಾಗಿ ಇರುತ್ತೆ. ಪಾಸ್ ಅಂತ ಗೊತ್ತಾದಾಗ ಮೊದಲಿದ್ದ ಚಿಂತೆ ಭಯ ಆ ಕ್ಷಣದಲ್ಲಿ ಮಾಯ ಆಗುತ್ತೆ. ಪರೀಕ್ಷೆಯಲ್ಲಿ ನಾನು ಓದಿದ್ದು ಮರೆತು ಹೋಗಿ ನನ್ನ ಜ್ಞಾಪನಶಕ್ತಿ ನನಗೆ ಕೈ ಕೊಟ್ಟಿರಬಹುದು ಆದರೆ ನಾನು ನಂಬಿದ ದೇವರು ಕೈ ಕೊಟ್ಟಿಲ್ಲ. ಅಮ್ಮನ ಹರಕೆ ಮತ್ತು ಹಾರೈಕೆ ಎರಡು ಇದ್ದರೆ ಸಾಕು ನಮಗೆ ಯಾವತ್ತಿಗೂ ಯಾವ ವಿಷಯದಲ್ಲಿಯೂ ಸೋಲು ನಷ್ಟ ಉಂಟಾಗುವುದಿಲ್ಲ, ಹಾಗೊಂದು ವೇಳೆ ಫೇಲ್ ಆದರೂ ಅದಕ್ಕೆ ಚಿಂತೆ ಪಡಬೇಕಿಲ್ಲ ಮತ್ತೊಂದು ಸಲ ಪರೀಕ್ಷೆ ಬರೆದು ಇನ್ನೂ ಉತ್ತಮ ಅಂಕ ಪಡೆದುಕೊಳ್ಳಬಹುದು. ಒಂದು ಪರೀಕ್ಷೆ ನಮ್ಮ ಜೀವನವನ್ನು ನಿರ್ಧರಿಸುವುದಿಲ್ಲ , ಜೀವನದಲ್ಲಿ ಎದುರಿಸಬೇಕಾದ ಪರೀಕ್ಷೆಗಳು ತುಂಬಾನೇ ಇವೆ. 

ನನಗೆ ಪವರ್ ಆಫ್ ಯೂಥ್ ಹಾಡಿನ ಸಾಲುಗಳು ನೆನಪಾಯಿತು ಅದೆಷ್ಟು ಚೆನ್ನಾಗಿದೆ ಮತ್ತು ಅಷ್ಟು ನಿಜವಾಗಿದೆ ಅದರ ಕೆಲವು ಸಾಲುಗಳು ನೀವೇ ನೋಡಿ.


ಗೆಲ್ಲಬೇಕು ನೀ ನಿಲ್ಲೋವರೆಗೂ

ನಿಲ್ಲಬೇಕು ನೀ ಗೆಲ್ಲೋವರೆಗೂ

ನಿನ್ನ ಬದುಕಿಗೆ ನೀನೇ ಕನ್ನಡಿ

ನಿನ್ನ ನಂಬಿ ಸಾಗು

 ಪಟ್ಟರೆ ಶ್ರಮವ

ಒಳ್ಳೆಯ ದಿನವ ಕಾಣುವೆ ನೀನು

ಪರೀಕ್ಷೆಯಲ್ಲಿ ಫೈಲ್ ಆಗೋದ್ರು

ಬದುಕು ಕಟ್ಟುವ.


ಪರೀಕ್ಷೆಯಲ್ಲಿ ಫೈಲ್ ಆದ್ರೂ ಪರ್ವಾಗಿಲ್ಲ ಬದುಕು ಕಟ್ಟೋದು ಮುಖ್ಯ. ಪರೀಕ್ಷೆ ಬಗ್ಗೆ ಜಾಸ್ತಿ ತಲೆ ಕೆಡೆಸಿಕಳ್ಳದೆ ಆರಾಮಾಗಿ ಬರೆಯಿರಿ. ಹಿಂದೆ ಆಗಿದ್ದು ಮುಂದೆ ಆಗುವುದು ಎಲ್ಲಾ ಒಳ್ಳೆಯದಕ್ಕೆ. ಏನಾಗಲಿ ಮುಂದೆ ಸಾಗುತ್ತಾ ಇರೋಣ ಅಷ್ಟೇ.

Monday, September 06, 2021

ಆದರ್ಶ್ ಮತ್ತು ಆಕಾಶ್ ಇಬ್ಬರು ಅಣ್ಣ ತಮ್ಮಂದಿರು, ಇವರಿಬ್ಬರ ಮುದ್ದಿನ ತಂಗಿ ಅಮೃತ. ಅಣ್ಣಂದಿರಿಗೆ ತಂಗಿ ಅಂದರೆ ಪಂಚಪ್ರಾಣ ಆದರೆ ತಂಗಿಗೆ ಅವರ ಮೇಲೆ ಅಷ್ಟೊಂದು ಪ್ರೀತಿ ಕಾಳಜಿ ಏನೂ ಇರಲಿಲ್ಲ, ಅವಳಿಗೆ ತನ್ನ ಬಗ್ಗೆ ಮಾತ್ರ ಆಲೋಚನೆ. ಅಪ್ಪ ಅಮ್ಮ ಮೇಲೂ ಅಷ್ಟೊಂದು ಪ್ರೀತಿ ಕಾಳಜಿ ಇರಲಿಲ್ಲ. 

ಅಮೃತ ನೋಡುವುದಕ್ಕೆ ತುಂಬಾ ಸುಂದರವಾಗಿ ಇದ್ದಳು ತುಂಬಾ ಜಾಣೆ, ತರಗತಿಯಲ್ಲಿ ಆಕೆಯೇ ಎಲ್ಲದರಲ್ಲೂ ಪ್ರಥಮ. ಎಲ್ಲವು ತನ್ನಿಂದಲೇ ಅನ್ನುವ ಜಂಬ ಆಕೆಗೆ. ತಮ್ಮ ತಂಗಿಯ ಚರುಕುತನ ನೋಡಿ ಅಣ್ಣಂದಿರಿಗೆ ತುಂಬಾ ಖುಷಿ, ಆಕೆಗೆ ಏನು ಬೇಕಿದ್ದರೂ ಅದನ್ನು ತಂದುಕೊಡುತ್ತಿದ್ದರು. ಅಮೃತ ತನಗೆ ಏನಾದರು ಬೇಕಾದಾಗ ಮಾತ್ರ ಅವರ ಹತ್ತಿರ ಮಾತನಾಡುತ್ತಿದ್ದಳು ಬೇರೆ ಸಮಯದಲ್ಲಿ ಅವರ ಕಡೆ ನೋಡುತ್ತಲೇ ಇರಲಿಲ್ಲ ಆಕೆ ಹೀಗಿದ್ದರೂ ಕೂಡ ಅಣ್ಣಂದಿರಿಗೆ ಅವಳ ಮೇಲೆ ಯಾವ ಕೋಪ ಬೇಜಾರು ಇರಲಿಲ್ಲ. ಅಮ್ಮ ಆಕೆಗೆ ಎಷ್ಟು ಬುದ್ಧಿಮಾತು ಹೇಳುತ್ತಿದ್ದರೂ ಆಕೆ ಅದಕ್ಕೆಲ್ಲ ಕಿವಿಗೊಡುತ್ತಿರಲಿಲ್ಲ. 

ಒಂದು ಬಾರಿ ಪರೀಕ್ಷೆಯಲ್ಲಿ ಅಮೃತಳಿಗಿಂತ ಅವಳ ಸ್ನೇಹಿತೆಗೆ ಜಾಸ್ತಿ ಅಂಕ ಸಿಕ್ಕಿತ್ತು ಅದೇ ಮೊದಲ ಬಾರಿಗೆ ಅವಳು ತರಗತಿಗೆ ದ್ವಿತೀಯ ಸ್ಥಾನ ಪಡೆದಿದ್ದು ಇಲ್ಲ ಅಂದರೆ ಯಾವಾಗಲೂ ಅವಳೇ ಪ್ರಥಮ ಸ್ಥಾನ ಪಡೆಯುತ್ತಿದ್ದಳು. ಅಂದು ಆಕೆ ಕೋಪದಿಂದ ಮನೆಗೆ ಬಂದು ಊಟ ಮಾಡದೇ ಅಳುತ್ತಾ ಕುಳಿತಿದ್ದಳು. ಅಪ್ಪ ಅಮ್ಮ ಎಷ್ಟು ಹೇಳಿದರು ಅವರ ಮಾತು ಕೇಳಲಿಲ್ಲ ಆದರ್ಶ್ ಏನೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ಆಕಾಶ್ ಆಕೆಗೆ ಪ್ರೀತಿಯಿಂದ ಸಮಾಧಾನ ಮಾಡಲು ಯತ್ನಿಸಿದ ಆದರೆ ಆಕೆ ಅಳುತ್ತಲೇ ಕೂತಿದ್ದಳು ಅಲ್ಲದೇ ಅಣ್ಣ ಎಂದು ನೋಡದೆ ಎದುರು ಮಾತನಾಡಿಬಿಟ್ಟಳು. ಆಕಾಶ್ ಸ್ವಲ್ಪ ಮುಂಗೋಪಿ ಆಗಿದ್ದರು ಕೂಡ ತನ್ನ ತಂಗಿಯ ಬಳಿ ಕೋಪ ತೋರಿಸಿಕೊಂಡಿರಲಿಲ್ಲ ಆದರೆ ಆ ದಿನ ಆಕೆ ಏಷ್ಟು ಹೇಳಿದರೂ ಸಮಾಧಾನವಾಗಲಿಲ್ಲ ಈ ಕಡೆ ಆಕಾಶ್ ಕೋಪ ನೆತ್ತಿಗೇರಿತ್ತು ಆದರೂ ಅದನ್ನು ಸಹಿಸಿಕೊಂಡು ಅಳುತ್ತಾ ಆಚೆ ಬಂದು ತನ್ನ ಅಣ್ಣ ಆದರ್ಶನಿಗೆ ಕರೆ ಮಾಡಿ ನಡೆದ ವಿಚಾರ ತಿಳಿಸಿದ. ಆತನ ಧ್ವನಿಯಲ್ಲಿ ಅವನ ದುಃಖ ಅಣ್ಣನಿಗೆ ಅರ್ಥವಾಗಿತ್ತು. ಆದರ್ಶ್ ತನ್ನ ಕೆಲಸ ಬಿಟ್ಟು ಬೇರೆ ಊರಿಂದ ಮನೆಗೆ ಬಂದ ಆತನಿಗೂ ಕೋಪ ಬೇಜಾರು ಆಗಿತ್ತು. ಅದಾದ ಮೇಲೆ ಅವರು ತಂಗಿಯ ಜೊತೆ ಮಾತು ಬಿಟ್ಟಿದ್ದರು ಸಮಯವೇ ಆಕೆಗೆ ಬುದ್ಧಿ ಕಲಿಸಬೇಕು ಆಗ ಅವಳಿಗೆ ಎಲ್ಲದರ ಅರಿವು ಆಗುತ್ತದೆ ಎಂದು ಇಬ್ಬರೂ ಸುಮ್ಮನಾಗಿದ್ದರು.

ಅಣ್ಣಂದಿರು ಮಾತು ಬಿಟ್ಟಿದ್ದಕ್ಕೆ ಅವಳಿಗೆ ಬೇಜಾರು ಆಗಲಿಲ್ಲ ಅವಳು ಮೊದಲಿನಂತೆ ತನ್ನ ಪಾಡಿಗೆ ಆರಾಮಾಗಿ ಇದ್ದಳು. ಆದರೆ ಆದರ್ಶ್ ಮತ್ತು ಆಕಾಶ್ ಮಾತ್ರ ತಮ್ಮ ತಂಗಿ ಬಂದು ಮಾತನಾಡುತ್ತಾಳೆ ಅವಳಿಗೆ ನಮ್ಮ ಮೇಲೆ ಪ್ರೀತಿ ಇದೆ ಎಂದುಕೊಂಡಿದ್ದರು. ಇಂತಹ ಅಣ್ಣಂದಿರು ಸಿಗುವುದಕ್ಕೆ ಎಷ್ಟು ಪುಣ್ಯ ಮಾಡಿರಬೇಕು ಆದರೆ ಅಣ್ಣಂದಿರ ಪ್ರೀತಿ ಕಾಳಜಿ ಆಕೆಗೆ ಅರ್ಥವೇ ಆಗುತ್ತಿರಲಿಲ್ಲ. 

ತಮ್ಮ ಮಗಳ ವರ್ತನೆಯಿಂದ ಅಪ್ಪ ಅಮ್ಮಗೂ ಕೂಡ ಬೇಜಾರು. ಎಷ್ಟು ಜಾಣೆ ಆದರೇನು ಈ ತರಹ ವರ್ತನೆ ಜಂಬ, ಸೊಕ್ಕು ಒಳ್ಳೆಯದಲ್ಲ. ಯಾವಾಗ ಇದರ ಅರಿವು ಆಕೆಗೆ ಆಗುತ್ತದೆ ಎಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು.

ತಿಂಗಳುಗಳೇ ಕಳೆಯಿತು ಆದರೂ ಅಮೃತ ಅಣ್ಣಂದಿರ ಜೊತೆ ಮಾತನಾಡಲೇ ಇಲ್ಲ. ದಿನಗಳು ಕಳೆಯುತ್ತಿದ್ದವು ಆದರೆ ಆಕೆ ಮಾತ್ರ ಬದಲಾಗಲೇ ಇಲ್ಲ.

ಅಮೃತ ಸ್ನೇಹಿತೆ ಒಂದು ವಾರ ತರಗತಿಗೆ ಬರಲೇ ಇರಲಿಲ್ಲ ಆಕೆಗೆ ಏನಾಗಿರಬಹುದು ಎಂದು ತಿಳಿಯಲು ಆಕೆಯ ಮನೆಗೆ ಹೋದಳು, ಅಲ್ಲಿಗೆ ಹೋದ ಮೇಲೆ ತಿಳಿಯಿತು ಅವಳ ಸ್ನೇಹಿತೆಯ ಅಣ್ಣ ತೀರಿ ಹೋಗಿದ್ದಾರೆ ಎಂದು. ತನ್ನ ಅಣ್ಣನನ್ನು ಕಳೆದುಕೊಂಡು ಬೇಸತ್ತು ಹೋಗಿದ್ದಳು ಆಕೆಯ ಸ್ನೇಹಿತೆ. ಕಣ್ಣುಗಳು ಕೆಂಪು ಕೆಂಪಾಗಿ ಹೋಗಿದ್ದವು ಅತ್ತು ಅತ್ತು, ಆಕೆಯನ್ನು ನೋಡುತಿದ್ದರೆ ನಮಗೂ ಕಣ್ಣು ತುಂಬಿ ಬರುವಂತಿತ್ತು. ನೋಡು ಅಮೃತ ನನಗಿದ್ದ ಒಬ್ಬ ಅಣ್ಣನನ್ನು ನಾನು ಕಳೆದುಕೊಂಡಿದ್ದೇನೆ ಆವನಿಗೆ ನಾನು ಎಂದರೆ ಜೀವ ಆದರೆ ಈಗ ಅವನೇ ನನ್ನ ಜೀವನದಿಂದ ದೂರ ಹೋಗಿದ್ದಾನೆ ಅವನಿಲ್ಲದೆ ನನಗೆ ಯಾವುದೂ ಬೇಡವಾಗಿದೆ ಅದಕ್ಕೆ ಕಾಲೇಜ್ ಕಡೆ ಬರಲು ಮನಸ್ಸು ಆಗುತ್ತಿಲ್ಲ, ನಿನಗೆ ನೋಡು ಇಬ್ಬರು ಅಣ್ಣಂದಿರು ಅದೆಷ್ಟು ಪ್ರೀತಿ ಮಾಡುತ್ತಾರೆ ಅವರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡ, ನನಗೆ ಗೊತ್ತು ನಿನಗೆ ಅಣ್ಣಂದಿರ ಬಗ್ಗೆ ಚೂರು ಪ್ರೀತಿ ಇಲ್ಲ ಆದರೆ ಅವರ ಪ್ರೀತಿಯ ಮನಸಿಗೆ ಎಂದೂ ನೋವು ಮಾಡಬೇಡ ಎಂದಳು ಅವಳ ಸ್ನೇಹಿತೆ. ಅಮೃತ ಏನೂ ಹೇಳದೆ ಹಾಗೆ ಸುಮ್ಮನೆ ಮನೆಗೆ ನಡೆದಳು. ಆ ದಿನ ರಾತ್ರಿ ಅಮೃತಗೆ ತನ್ನ ಅಣ್ಣ ಆಕಾಶ್ ಗೆ ರಸ್ತೆ ಅಪಘಾತ ಆಗಿ ಅವನು ಸಾಯುವ ಕನಸು ಬಿತ್ತು ಗಾಬರಿಯಿಂದ ಎಚ್ಚರವಾಗಿ ನಂತರ ತನ್ನ ಅಣ್ಣನ ಕೋಣೆಗೆ ಓಡಿ ಹೋಗುತ್ತಾಳೆ. ಅವಳ ಕಣ್ಣುಗಳು ತುಂಬಿ ಹೋಗಿದ್ದವು ತನ್ನ ಸ್ನೇಹಿತೆಗೆ ಆದಂತೆ ಅವಳಿಗೂ ಆಗಿ ಹೋಯಿತೇ ಅನ್ನುವ ಭಯ ಅವಳ ಕಣ್ಣಿನಲ್ಲಿ ಇತ್ತು. ಅಣ್ಣ ಕೋಣೆಯಲ್ಲಿ ಆರಾಮಾಗಿ ಮಲಗಿದ್ದನು ಕಂಡು ಸಮಾಧನಾಗೊಂಡಳು. ಮರುದಿನ ಬೆಳಗ್ಗೆ ತನ್ನ ಅಣ್ಣಂದಿರನ್ನು ಕರೆದು ಕ್ಷಮೆ ಕೇಳಿದಳು ಇಬ್ಬರನ್ನೂ ತಬ್ಬಿಕೊಂಡು ಜೋರಾಗಿ ಅತ್ತಳು. ಅಣ್ಣಂದಿರಿಗೆ ಆಶ್ಚರ್ಯ ಧಿಡೀರ್ ಆಗಿ ಹೇಗೆ ಈಕೆಗೆ ಎಲ್ಲಿಲ್ಲದ ಪ್ರೀತಿ ಬಂತು ಎಂದು. ಅವರ ನಂಬಿಕೆಯಂತೆ ಕಾಲವೇ ಅವಳಿಗೆ ಎಲ್ಲದರ ಅರಿವು ಮೂಡಿಸಿತು. ಅಪ್ಪ ಅಮ್ಮನಿಗೂ ತಮ್ಮ ಮಗಳ ಬದಲಾವಣೆಯಿಂದ ಖುಷಿ ಆಗಿತ್ತು. ಅಮೃತ ಪೂರ್ತಿಯಾಗಿ ಬದಲಾಗಿ ತನ್ನ ಅಣ್ಣಂದಿರ ಜೊತೆಗೆ ಖುಷಿಯಾಗಿ ಇದ್ದಳು.


ಇದೊಂದು ನನ್ನ ಕಲ್ಪನೆಯ ಕಥೆ ಅಷ್ಟೇ ಆದರೆ ನಿಜ ಜೀವನದಲ್ಲೂ ಹೀಗೆ ಆಗುತ್ತಾ ಇರುತ್ತದೆ. ಅಣ್ಣ - ತಂಗಿ ಆಗಿರಲಿ ಅಥವಾ ಯಾವುದೇ ಸಂಭಂಧಗಳು ಆಗಿರಲಿ ನಾವು ಅವರ ಜೊತೆ ಅನ್ಯೋನ್ಯವಾಗಿ ಇರಬೇಕು. ಇನ್ನೊಬ್ಬರು ನಮ್ಮ ಮೇಲೆ ತೋರಿಸುವ ಪ್ರೀತಿ, ಕಾಳಜಿಗೆ ಪ್ರತಿಯಾಗಿ ನಾವು ಅವರನ್ನು ಪ್ರೀತಿಯಿಂದ ಕಾಣಬೇಕು ಪ್ರೀತಿ ಇಲ್ಲವಾದರೂ ಅವರ ಭಾವನೆಗೆ ಮನಸ್ಸಿಗೆ ನೋವು ಉಂಟುಮಾಡಬಾರದು. ಕಳೆದುಕೊಂಡ ಮೇಲೆ ಅಥವಾ ದೂರ ಆದ ಮೇಲೆ ಅವರನ್ನು ನೆನೆದು ಆಳುವ ಬದಲು ನಾವು ಕಳೆದುಕೊಳ್ಳುವ ಮೊದಲೇ ಅವರ ಜೊತೆ ಚೆನ್ನಾಗಿ ಖುಷಿಯಾಗಿ ಇರಬೇಕು. 

Thursday, September 02, 2021

ಚಹಾ

 

 ಚಿತ್ರಕೃಪೆ - ಅಂತರ್ಜಾಲ

ಪ್ರತಿ ದಿನ ಆರಂಭವು ನಿನ್ನೊಂದಿಗೆ

ಸೋಲುವುದು ನಾಲಿಗೆ ನಿನ್ನ ರುಚಿಗೆ

ಪರಿಹಾರವು ನೀ ನೋವಿಗೆ

ನಿತ್ಯ ಉಪಹಾರವು ನಿನ್ನೊಂದಿಗೆ

ಜೊತೆಯಾಗಿರುವೆ ಒಂಟಿ ಬದುಕಿಗೆ

ಉಲ್ಲಾಸ ತುಂಬುವೆ ಮನಸಿಗೆ

ನಿನ್ನಿಂದ ಈ ಮೊಗದಲಿ ಕಿರುನಗೆ

ಮಿತವಾದ ಹಿತವಾದ

ಸಿಹಿಯಾದ ಸವಿಯಾದ

ಆ ಸ್ವಾದ

ಆಸ್ವಾದಿಸಲು ಆನಂದ

Wednesday, September 01, 2021

ಮಳೆ ತಂದ ರಗಳೆ

ಮಳೆಯು ಇರಲಿ ಜೊತೆಗೆ ಛತ್ರಿನು ಇರಲಿ


 ನಮಗೆ ಹೇಗೆ ಮೂಡ್ ಸ್ವಿಂಗ್ಸ್ ಇರುತ್ತೋ ಹಾಗೆಯೇ ಪ್ರಕೃತಿಗೆ ಮೂಡ್ ಸ್ವಿಂಗ್ಸ್ ಇರತ್ತೆ ಅಂತ ಅನ್ಸತ್ತೆ. ಅದು ಯಾವಾಗ ಹೇಗೆ ಇರುತ್ತೆ, ಯಾವಾಗ ಬಿಸಿಲು, ಯಾವಾಗ ಮಳೆ, ಚಳಿ ಯಾವಾಗ ಏನ್ ಆಗತ್ತೆ ಅಂತ ಹೇಳೋದಕ್ಕೆ ಆಗಲ್ಲ. ಬೇಸಿಗೆ ಕಾಲದಲ್ಲಿ ಒಂದೊಂದು ಸಲ ಮಳೆ ಬರುತ್ತೆ, ಒಂದೊಂದ್ ಸಲ ಮಳೆಗಾಲದಲ್ಲಿ ಜೋರು ಸೆಕೆ ಇರುತ್ತೆ. ಈ ಮಳೆ ಯಾವಾಗ ಬರುತ್ತೆ ಅಂತ ಹೇಳಕ್ಕೆ ಆಗಲ್ಲ.  ಅದಕ್ಕೆ ಮಳೆಗಾಲ ಶುರು ಆಗುತ್ತಿದ್ದ ಹಾಗೆ ಅಮ್ಮ ದಿನ ಹೇಳೋ ಮಾತು ಒಂದೆ ಮಳೆಯಲ್ಲಿ ಸುಮ್ಮ್ ಸುಮ್ನೆ ನೆನೆಯಬೇಡ ಜ್ವರ ಬರುತ್ತೆ ನೆಗಡಿ ಆಗುತ್ತೆ,ಛತ್ರಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡ ಅಂತ. ಅಮ್ಮ ಏನೋ ಪ್ರೀತಿ ಕಾಳಜಿಯಿಂದ ದಿನ ಹೇಳ್ತಾರೆ ಆದ್ರೆ ನಮ್ಮ ಕಿವಿಗೆ ಇದೆಲ್ಲ ಎಲ್ಲಿ ತಾನೆ ಕೇಳಿಸುತ್ತೆ ನಾವು ನಮ್ಮದೇ ಲೋಕದಲ್ಲಿ ಮುಳುಗಿರುತ್ತೇವೆ. 

ಅಮ್ಮ ಹೇಳಿದ್ದು ಸರೀನೇ ಅದಕ್ಕೆ ನಾನು ಬ್ಯಾಗ್ ನಲ್ಲಿ ಛತ್ರಿ ತಪ್ಪಿಸುತ್ತಾ ಇರಲ್ಲಿಲ್ಲ. ಮಳೆ ಬಂದರೂ ಇಲ್ಲದೇ ಇದ್ದರೂ ಛತ್ರಿ ನನ್ನ ಬ್ಯಾಗ್ ಅಲ್ಲಿಯೇ ಇರುತ್ತಿತ್ತು. 

ಹೀಗೆ ಒಂದು ದಿನ ಕಾಲೇಜಿಗೆ ಹೊರಡುವಾಗ ಅದ್ಯಾವುದೋ ಕಾರಣಕ್ಕೆ ಛತ್ರಿಯನ್ನು ಬ್ಯಾಗಿನಿಂದ ಹೊರಗೆ ತೆಗೆದಿದ್ದೆ ಬಸ್ಸ್ ಮಿಸ್ಸ್ ಆಗುತ್ತೆ ಅಂತ ಆತುರದಲ್ಲಿ ಇದ್ದ ಕಾರಣ ಛತ್ರಿಯ ನೆನಪೇ ಆಗಲಿಲ್ಲ ಅದನ್ನು ಮನೆಯಲ್ಲಿಯೇ ಮರೆತು ಹೋಗಿದ್ದೆ. ಮನೆ ಬಿಟ್ಟು ಸ್ವಲ್ಪ ದೂರ ಹೋಗಿದ್ದೆ ಅಷ್ಟೇ ಟ್ರಿಣ್ ಟ್ರಿಣ್ ಅಂತ ಫೋನ್ ರಿಂಗ್ ಆಯಿತು ಯಾರು ಅಂತ ನೋಡಿದ್ರೆ ಅಮ್ಮ , ಯಾಕಮ್ಮ ಏನ್ ಆಯ್ತು ಬೇಗ ಹೇಳು ನನಗೆ ಲೇಟ್ ಆಗ್ತಾ ಇದೆ ಬಸ್ಸ್ ಮಿಸ್ ಆಗುತ್ತೆ ಅಂತ ಹೇಳಿದೆ. ನೀನು ಛತ್ರಿ ಮರೆತು ಹೋಗಿದ್ದೀಯ ವಾಪಸ್ ಬಂದು ತೆಗೆದುಕೊಂಡು ಹೋಗು ಮಳೆ ಬಂದ್ರೆ ಒದ್ದೆ ಆಗ್ತಿಯ ಅಂದ್ರು. ನನಗೆ ಲೇಟ್ ಬೇರೆ ಆಗಿತ್ತು ಸುತ್ತ ನೋಡಿದ್ರೆ ಬಿಸಿಲು ಇತ್ತು ಮಳೆ ಬರುವ ಯಾವ ಸೂಚನೆಯೂ ಇರಲಿಲ್ಲ, ಅದಕ್ಕೆ ಪರ್ವಾಗಿಲ್ಲ ಅಮ್ಮ ಮಳೆ ಬರಲ್ಲ ನಾನು ಹೋಗ್ತೀನಿ ಲೇಟ್ ಆಗ್ತಿದೆ ಅಂತ ಹೇಳಿ ಹೊರಟು ಹೋದೆ. 

ಆವತ್ತು ಇಡೀ ದಿನ ಬಿರು ಬಿಸಿಲು ಇದ್ದ ಕಾರಣ ನನಗೆ ಸ್ವಲ್ಪ ಸಮಾಧಾನ. ಸಂಜೆ ಮನೆಗೆ ಹೋಗೋ ಸಮಯ ಆಗಿತ್ತು ಆಗಲೂ ಮಳೆ ಬರುವ ಸೂಚನೆ ಇರಲ್ಲಿಲ್ಲ. ನಾನು ಬಸ್ ಇಳಿದು ಮನೆ ಕಡೆ ಹೋಗುತ್ತಿದ್ದೆ ಅಷ್ಟರಲ್ಲಿ ಹನಿ ಹನಿ ಮಳೆ ಶುರು ಆಯ್ತು ಛತ್ರಿ ಬೇರೆ ಇರಲಿಲ್ಲ ಆ ಹನಿ ಹನಿ ಮಳೆಗೆ ಒದ್ದೆಯಾಗಿ ಮುಂದೆ ನಡೆದೆ ಮಳೆ ಜೋರಾಗಿಯೇ ಬರಲು ಶುರು ಆಯಿತು ಮನೆ ಸೇರುತ್ತಿದ್ದಂತೆ ನಾನು ಫುಲ್ ಒದ್ದೆ ಆಗಿದ್ದೆ. ಅಮ್ಮನ ಕೈಯಿಂದ ಬೈಗುಳ ಕೇಳಲು ರೆಡಿ ಆಗಿದ್ದೆ, ನೋಡು ನಾನು ಹೇಳಿದ ಮಾತು ಎಲ್ಲಿ ಕೇಳ್ತಿಯಾ ನಾನು ಹೇಳಿದಾಗಲೇ ಬಂದು ಛತ್ರಿ ತೆಗೆದುಕೊಂಡು ಹೋಗಿದ್ದರೆ ಹೀಗೆಲ್ಲ ಒದ್ದೆಯಾಗಿ ಬರಬೇಕಿತ್ತ? ಇವಾಗ ಜ್ವರ ನೆಗಡಿ ಆಗ್ಲಿ ಆಮೇಲೆ ಇದೆ ನಿಂಗೆ ಹಬ್ಬ ಅಂತ ಹೆದರಿಸಿ ಹೋದ್ರು. ಅಮ್ಮ ಹೇಳಿದ ಮಾತು ಸುಳ್ಳಾಗಿದ್ದು ಉಂಟೆ!? ಅಮ್ಮ ಹೇಳಿದಂತೆ ರಾತ್ರಿ ಚಳಿ , ಜ್ವರ , ನೆಗಡಿ ಆಗಿತ್ತು. ಅಮ್ಮನ ಮಾತಿನಿಂದಲೇ ಜ್ವರ ಬಂದ ಹಾಗೆ ಅನಿಸುತಿತ್ತು. ಅದಕ್ಕೆ ದೊಡ್ಡೋರು ಹೇಳೋ ಮಾತು ಕೇಳಬೇಕು ಅಂತ ಹೇಳೋದು ಅನ್ಸತ್ತೆ. 






Saturday, August 28, 2021

ಮಾಸ್ಕ್

ನನಗಂತೂ ಮಾಸ್ಕ್ ಅಂತ ಹೇಳುವಾಗಲೇ ಉಸಿರಾಡಲು ಕಷ್ಟವಾದಂತೆ ಅನುಭವ ಆಗುತ್ತದೆ. ಇಡೀ ದಿನ ಮಾಸ್ಕ್ ಧರಿಸಿ ಕುಳಿತುಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ! ಆದರೆ ಏನು ಮಾಡುವುದು ಈ ಕೊರೋನ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು, ನಾವು ಮತ್ತು ನಮ್ಮ ಸುತ್ತಮುತ್ತ ಇರುವವರು ಸುರಕ್ಷಿತವಾಗಿ ಇರಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. 
ನಾವು ಹಿಂದೆ ಎಂದೂ ಅಂದುಕೊಂಡಿರಲಿಲ್ಲ ಕೋರೋನ ಎಂಬ ವೈರಸ್ ನಮ್ಮ ಜೀವದ ಜೊತೆಗೆ ಆಟ ಆಡುವುದಲ್ಲದೆ ನಮ್ಮ ಜೀವನ ಶೈಲಿಯನ್ನು ಹೀಗೆಲ್ಲ ಬದಲಾಯಿಸುತ್ತದೆ ಎಂದು! ಈ ಕೊರೋನ ವೈರಸ್ ಶುರುವಾದ ಮೇಲೇ ಲಾಕ್ಡೌನ್, ಸೀಲ್ಡೌನ್ , ಕ್ವಾರಂಟೈನ್,ಸೋಶಿಯಲ್ ಡಿಸ್ಟೆನ್ಸ್ ಮಾಸ್ಕ್, ಸ್ಯಾನಿಟೈಜರ್, ಈ ಪದಗಳನ್ನೇ ಜಾಸ್ತಿ ಕೇಳಿದ್ದು ಹಾಗೂ ಬಳಸಿದ್ದು. 
ಮಾಸ್ಕ್ ಧರಿಸಿಕೊಂಡು ಆಚೆ ಹೋಗಿ ಬರುವುದು ಅಂದ್ರೆ ತಲೆ ನೋವು, ಹಾಗಂತ ಆಚೆ ಹೋಗದೇ ಇರೋದಕ್ಕೆ ಆಗುತ್ತದೆಯೇ? ಹಾಗೋ ಹೀಗೋ ಅದನ್ನು ಹಾಕಿಕೊಂಡು ಹೋಗಲೇಬೇಕು. 
ಕಳೆದ ಒಂದೂವರೆ ವರ್ಷದಿಂದ ಮಾಸ್ಕ್ ಧರಿಸಿ ಧರಿಸಿ ಈಗ ರೂಢಿ ಆದಂತಿದೆ. ಆದರೆ ಇಡೀ ದಿನ ಮಾಸ್ಕ್ ಹಾಕಿಕೊಂಡು ಇರೋದು ತುಂಬಾ ಕಷ್ಟನೇ. ಬೇರೆ ಸಮಯದಲ್ಲಿ ಹೇಗೋ ಪರ್ವಾಗಿಲ್ಲ ಆದರೆ ಎಕ್ಸಾಮ್ ಸಮಯದಲ್ಲಿ ಸಿಕ್ಕಾಪಟ್ಟೆ ಹಿಂಸೆ ಆಗುತ್ತೆ. ಒಂದು ಕಡೆ ಆನ್ಲೈನ್ ಕ್ಲಾಸ್ ಕೇಳಿ ಆಫ್ಲೈನ್ ಎಕ್ಸಾಮ್ ಬಾರಿಯೋ ಟೆನ್ಶನ್ ಇನ್ನೊಂದು ಕಡೆ ಈ ಮಾಸ್ಕ್ ನಿಂದ ಉಸಿರು ಕಟ್ಟಿದ ಹಾಗೆ ಆಗುತ್ತದೆ. 3 ಗಂಟೆ ಎಕ್ಸಾಮ್ ಬರೆದು  ಆಚೆ ಬರಬೇಕಾದರೆ ಮುಖ ಮತ್ತು ಮಾಸ್ಕ್ ಎರಡೂ ಬೆವರಿ ನೀರಾಗಿ ಹೋಗಿರುತ್ತೆ. ಆದರೆ ಮಾಸ್ಕ್ ಅನ್ನು ದೂರುವ ಹಾಗಿಲ್ಲ ಇದೆಲ್ಲ ಕೋರೋನ ತಂದ ಪಜೀತಿ ಅಷ್ಟೇ ಅದರಿಂದ ಸುರಕ್ಷಿತವಾಗಿ ಇರಬೇಕಾದರೆ ಇದೆಲ್ಲ ಅನುಭವಿಸಲೇಬೇಕು.
ಚಿತ್ರಕೃಪೆ - ಅಂತರ್ಜಾಲ


 
ಇದೆಲ್ಲ ಒಂದು ಕಡೆ ಇರ್ಲಿ, ನಾನು ದಿನ ಕಾಲೇಜಿಗೆ ಹೋಗುವಾಗ ಗಮನಿಸುತ್ತೇನೆ ಕೆಲವರು ತಾವು ಧರಿಸಿರುವ ಬಟ್ಟೆಗೆ ಮ್ಯಾಚ್ ಆಗುವಂತೆ ಮಾಸ್ಕ್ ಹಾಕಿಕೊಂಡಿರುತ್ತಾರೆ. ಅಲ್ಲಾ ಈ ಕಲರ್ ಕಲರ್ , ಡಿಸೈನ್ ಡಿಸೈನ್ , ಮ್ಯಾಚ್ ಆಗುವ ಮಾಸ್ಕ್ ಹುಡುಕಿಕೊಂಡು ಕೂರುವಷ್ಟು ತಾಳ್ಮೆ, ಸಮಯ ಅದೆಲ್ಲಿಂದ ಸಿಗುತ್ತೆ ಅವರಿಗೆಲ್ಲ? ಇರ್ಲಿ ಬಿಡಿ ಎಲ್ಲ ಅವರವರ ಇಷ್ಟ ನೋಡೋ ನಮಗೆ ಯಾಕೆ ಕಷ್ಟ ಅಲ್ವಾ? ಸರಿಯಾಗಿ ಮಾಸ್ಕ್ ಹಾಕಿದ್ರೆ ಆಯ್ತು ಯಾವ ಕಲರ್ ಆದರೇನು ಯಾವ ಡಿಸೈನ್ ಆದರೇನು.

ಈ ಮಾಸ್ಕ್ ಇಲ್ಲದೆ ಹೊರಗಡೆ ಹೋಗುವುದು ಯಾವಾಗ? ಎಲ್ಲವೂ ಮೊದಲಿನಂತೆ ಆಗುವುದು ಯಾವಾಗ? ಈ ಕೋರೋನ ವೈರಸ್ ಇಂದ ಬಿಡುಗಡೆ ಯಾವಾಗ? ಇದೆಲ್ಲ ನಮಗೆ ಯಾರಿಗೂ ಗೊತ್ತಿಲ್ಲ. ಆದಷ್ಟು ಬೇಗ ಎಲ್ಲವೂ ಸರಿಯಾಗಿ ಮತ್ತೆ ಮೊದಲಿನಂತೆ ಆಗಲಿ ಅನ್ನುವುದಷ್ಟೇ ನಮ್ಮ ಆಶಯ. 
ಎಲ್ಲರೂ ಮಾಸ್ಕ್ ಧರಿಸಿ, ಲಸಿಕೆ ತೆಗೆದುಕೊಳ್ಳಿ, ನೀವು ಸುರಕ್ಷಿತವಾಗಿರಿ ನಿಮ್ಮವರನ್ನೂ ಸುರಕ್ಷಿತವಾಗಿ ಕಾಪಾಡಿಕೊಳ್ಳಿ.

ಚಿತ್ರಕೃಪೆ - ಅಂತರ್ಜಾಲ



Thursday, August 26, 2021

ಅಮ್ಮ


ನಿನಗೆ ನೋವಾದರೆ ಅಳುವಳು ಅವಳು

ನಿನ್ನ ಕಣ್ಣೀರ ಒರೆಸುವ ಕೈಗಳು ಅವಳದು

ಸದಾ ನಿನಗೆ ಒಳಿತನ್ನೇ ಬಯಸುವಳು

ಬಲು ಮುಗ್ದ ಮನಸು ಅವಳದು

ಎಂದೆಂದೂ ನಿನಗಾಗಿಯೇ ಬದುಕುವಳು

ಕಪಟ ಪ್ರೀತಿಯ ಎಂದಿಗೂ ತೋರಳು

ಅಪ್ಪಟ ಬಂಗಾರದ ಮನಸಿನ ಗುಣದವಳು


Sunday, August 08, 2021

ಐಶ್ವರ್ಯ

 

ಐಶ್ವರ್ಯವನ್ನು ಗಳಿಸುವುದು ಕಷ್ಟ 

ಉಳಿಸಿಕೊಳ್ಳುವುದು ಕಷ್ಟ

ವ್ಯಯ ಮಾಡುವುದಷ್ಟೇ ಸುಲಭ

ಕಷ್ಟದಿಂದ ಒಲಿಯುತ್ತದೆಯೋ

 ಅದೃಷ್ಟದಿಂದ ಒಲಿಯುತ್ತದೆಯೋ

ಅದರ ಇಷ್ಟದಂತೆ ಒಲಿಯುತ್ತದೆಯೋ

ಹೇಗೆ ಒಲಿದರು ಅದನ್ನು ಹಾಗೇ

 ಉಳಿಸಿಕೊಳ್ಳುವುದು ಮಾತ್ರ ಕಷ್ಟ

Saturday, August 07, 2021

ಕನಸಿನ ದೋಣಿ

 

ಪಯಣ ಶುರು ಆಗಿದೆ ಕನಸಿನ ದೋಣಿಯಲ್ಲಿ
ಸಿಲುಕಿದೆ ಇಂದು  ಕಷ್ಟಗಳ ಸಾಗರದಲ್ಲಿ
ನಿನ್ನಯ ಕನಸಿನ ದೋಣಿಗೆ
ನಾವಿಕನು ನೀನೇ ಅಲ್ಲವೇ
ಭರವಸೆ ಬೇಕಿದೆ ನಿನಗೆ
ನಿನಗೆ ನೀನೇ ಧೈರ್ಯವೇ
ಮರೆಯುತ ಎಲ್ಲಾ ನೋವ
ಸೇರುವೆಯಾ ಆ ದೂರ ತೀರವ